Thursday 19 January 2023

ಸಿದ್ಧಾಪುರ ಪ್ರೌಢಶಾಲೆಯ ಶ್ರೀನಿಧಿ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

 


30ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನ ಸಿದ್ಧಾಪುರ ಪ್ರೌಢಶಾಲೆಯ  ಶ್ರೀನಿಧಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.  "ಆರೋಗ್ಯ ಮತ್ತು ಯೋಗಕ್ಷೇಮಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ" ಎಂಬ ಮುಖ್ಯವಿಷಯದ ಮೇಲೆ ಈ ಬಾರಿಯ ಸಮಾವೇಶ ನಡೆಯುತ್ತಿದೆ. ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ತಾಂತ್ರಿಕ ನಾವಿನ್ಯತೆ ಎಂಬ ಉಪವಿಷಯವನ್ನು ಆಧರಿಸಿ ಶ್ರೀನಿಧಿ "ಗ್ರಾಮೀಣ ಜನರ ಚಿತ್ತ ಕಾಂಕ್ರೀಟೀಕರಣ ದತ್ತ" ಎಂಬ ಅಧ್ಯಯನವನ್ನು ನಡೆಸಿದ್ದಳು.



 ಶಾಲೆಯ ವಿಜ್ಞಾನ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ವಿ ಭಟ್ ರವರ ಮಾರ್ಗದರ್ಶನದಲ್ಲಿ ನಡೆದ ಈ ಅಧ್ಯಯನವನ್ನು ತನ್ನ ತರಗತಿಯ ಸಹಪಾಠಿ ರಚನಾಳ ಜೊತೆಗೂಡಿ ನಡೆಸಿದ್ದಳು.



 ಮನೆಯಂಗಳಕ್ಕೆ ಬಳಸುವ ಇಂಟರ್ ಲಾಕ್ ಗಳಲ್ಲಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಿಕೊಳ್ಳುವ ಮೂಲಕ  ಹರಿದುಹೋಗಬಹುದಾದ ಮಳೆನೀರನ್ನು ಅಂತರ್ಜಲದ ಭಂಡಾರಕ್ಕೆ ಸೇರಿಸಬಹುದು ಎಂಬ ಸಲಹೆಯೂ ಈ ಅಧ್ಯಯನ ಒಳಗೊಂಡಿದೆ. ಈ ಅಧ್ಯಯನವನ್ನು ಪರಿಣಾಮಕಾರಿಯಾಗಿ ಮಂಡಿಸಿದ ಕುಮಾರಿ‌ ಶ್ರೀನಿಧಿ ತೀರ್ಪುಗಾರರ ಪ್ರಶ್ನೆಗಳಿಗೆ ಅತ್ಯುತ್ತಮವಾಗಿ ಉತ್ತರಿಸಿ ರಾಷ್ಟ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿದ್ದಾಳೆ. ಆಜ್ರಿ ಯಡೂರಿನ ಶ್ರೀ ಗೋಕುಲಾನಂದ ಮತ್ತು ಶ್ರೀಮತಿ ಸುಮಿತ್ರಾರವರ ಮಗಳಾದ ಶ್ರೀನಿಧಿ ಕಲಿಕೆ ಮತ್ತು ಸಾಂಸ್ಕೃತಿಕ ರಂಗಗಳೆರಡರಲ್ಲೂ ತನ್ನ ಛಾಪು ಮೂಡಿಸಿರುವ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ. ಇದೀಗ ಯುವ ವಿಜ್ಞಾನಿಯಾಗಿಯೂ ಆಕೆ ಗುರುತಿಸಲ್ಪಟ್ಟಿರುವುದಕ್ಕಾಗಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.