Friday 23 December 2022

ಗಣಿತ ದಿನ: ಪೋಷಕರೊಬ್ಬರ ಪ್ರತಿಕ್ರಿಯೆ

 

ಸಿದ್ದಾಪುರ ಪ್ರೌಢಶಾಲೆಯಲ್ಲಿ ನಡೆದ ಗಣಿತ ದಿನಾಚರಣೆಯ ಕುರಿತು ಶ್ರೀಮತಿ‌ ಪೂರ್ಣಿಮಾ ಕಮಲಶಿಲೆ ತಮ್ಮ ಫೇಸ್‌ಬುಕ್‌ ಗೋಡೆಯ ಮೇಲೆ ಹಂಚಿಕೊಂಡ ಬರೆಹವಿದು.

---------------------------








---------------------------


ತರಗತಿಯೊಳಗಿನ ಕಲಿಕೆಗಿಂತ ತರಗತಿಯಾಚೆ ಕಲೆತು ಕಲಿಯುವುದು,ಸ್ಪರ್ಧೆ, ಪ್ರಯೋಗ, ಮಾದರಿ, ಚಿತ್ರಕಲೆ, ರಸಪ್ರಶ್ನೆ ಎಂದರೆ ಈ ವಿದ್ಯಾರ್ಥಿ ಗಡಣಕ್ಕೆ ನೂರಾನೆಯ ಉತ್ಸುಕತೆ.

ಇವತ್ತು ಗಣಿತ ದಿನವಂತೆ. ನನ್ನ ಮಗನ ಶಾಲೆಯಲ್ಲಿ ಎರಡು ದಿನಗಳಿಂದ ಮಕ್ಕಳೆಲ್ಲ ಅದೆಷ್ಟು ಚುರುಕಾಗಿ ಲವಲವಿಕೆಯಿಂದ ಈ ದಿನದ ಆಚರಣೆಗೆ ತಯಾರಿ ಮಾಡಿಕೊಂಡರು. ನಮ್ಮ ಸರಕಾರಿ ಶಾಲೆಗಳಲ್ಲಿ ಈಗ ಎಲ್ಲ ವಿಷಯಗಳಿಗೂ ಕ್ಲಬ್/ ಸಂಘಗಳಿವೆ. ವಿಷಯವಾರು ಶಿಕ್ಷಕರು ಬಹಳ ಕ್ರಿಯಾಶೀಲರಾಗಿ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾರೆ.

ಮಕ್ಕಳೂ ಕೂಡ ಅಂಜಿಕೆ ಇಲ್ಲದೆ ಎಲ್ಲ ಚಟುವಟಿಕೆಗಳಲ್ಲಿ ನಾ ಮುಂದು ತಾ ಮುಂದು ಎಂದು ತೊಡಗಿಸಿಕೊಳ್ಳುತ್ತಾರೆ.

ಗಣಿತ ದಿನದ ಅಂಗವಾಗಿ ಗಣಿತದ ರಸಪ್ರಶ್ನೆ, ಗಣಿತದ ಮಾದರಿಗಳ ತಯಾರಿ, ಗಣಿತಜ್ಞರ ಚಿತ್ರ ಬಿಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ ಎಂದು ನನ್ನ ಮಗ ನಿನ್ನೆ ಶಾಲೆಯಿಂದ ಬಂದವನೆ ವರದಿ ಒಪ್ಪಿಸಿದ್ದ.






ರಸಪ್ರಶ್ನೆ ಸ್ಪರ್ಧೆ ನಿನ್ನೆಯೆ ನಡೆಸಿದರಂತೆ, ಇಂದು ವಿದ್ಯಾರ್ಥಿ ಗಳು ಬಿಡಿಸಿದ ಚಿತ್ರಗಳು ಮತ್ತು ಗಣಿತ ಮಾದರಿಗಳ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಿತು. ಜೊತೆಗೆ ಸಭಾ ಕಾರ್ಯಕ್ರಮ ಆಯೋಜಿಸಿ ಗಣಿತ ಶಿಕ್ಷಕರು ,ವಿಜ್ಞಾನ ಶಿಕ್ಷಕರು ಗಣಿತದ ಗಂಭೀರತೆ,ನಿಖರತೆ, ಮೋಜು, ಚುರುಕುಗಳ ಕುರಿತು ತಿಳಿಸುವುದರ ಜೊತೆಜೊತೆಗೆ ರಾಮಾನುಜಂ, ಹಾರ್ಡಿಯವರ ಕುರಿತು ಒಂದಿಷ್ಟು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಕೆಲವು ವಿದ್ಯಾರ್ಥಿಗಳು ಗಣಿತದ ಕುರಿತು ಅವರ ಅರಿವನ್ನು ಮಾತಿನ ಮೂಲಕ ತೆರೆದಿಟ್ಟರು. ಸ್ಪರ್ಧೆಯಲ್ಲಿ ವಿಜೇಯರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಹೀಗೆ ಗಣಿತ ದಿನ ಲೆಕ್ಕಕ್ಕೊಂದು ದಿನವಾಗಲಿಲ್ಲ. ಲೆಕ್ಕದ ಹಬ್ಬವೇ ಆಯಿತು ಎಂದು ಮಗ ಸಂತಸದಿಂದ ವರದಿ ನೀಡಿದ.

ನಾವೆಲ್ಲ ಇಪ್ಪತ್ತೈದು ವರ್ಷದ ಹಿಂದೆ ಕಲಿತ ಸರಕಾರಿ ಶಾಲೆಗೂ ,ಈಗ  ಇರುವ ಸರಕಾರಿ ಶಾಲೆಗೂ ಇರುವ ಅಜಗಜಾಂತರ ಹೊಟ್ಟೆ ಉರಿಸಿತು. ನಾನೂ ಈಗ ಸರಕಾರಿ ಶಾಲೆಯ ವಿದ್ಯಾರ್ಥಿ ಆಗಿರಬೇಕಿತ್ತು ಎಂದು ಮನ ಮತ್ತೆ ಮತ್ತೆ ಕೂಗಿತು.

ಅನುಭವಿ ಮತ್ತು ಉತ್ಸಾಹಿ ಶಿಕ್ಷಕರು ಸರಕಾರಿ ಶಾಲೆಯ ಜೀವಾಳ. ಅಂತಹ  ಶಿಕ್ಷಕರ ತಂಡ ನಮ್ಮ ಸರಕಾರಿ ಪ್ರೌಢ ಶಾಲೆ ಸಿದ್ಧಾಪುರ ,ಕುಂದಾಪುರ ತಾಲೂಕು,ಉಡುಪಿ ಜಿಲ್ಲೆಯಲ್ಲಿ ಇರುವುದು ಈ ಭಾಗದ ವಿದ್ಯಾರ್ಥಿಗಳ ಸೌಭಾಗ್ಯ. ಊರಿನವರಿಗೆ, ಪೋಷಕರಿಗೆ ಇದು  ಹೆಮ್ಮೆಯ ಸಂಗತಿ.

ಗಣಿತ ದಿನ ಆಯೋಜಿಸಿದ ಶಿಕ್ಷಕರ ತಂಡಕ್ಕೆ ಕೃತಜ್ಞತೆಗಳು.


ಪೂರ್ಣಿಮಾ ಕಮಲಶಿಲೆ.

-----------------------------

ಈ ಸುದ್ದಿಯನ್ನೂ ಓದಿ:

ಸಿದ್ಧಾಪುರ ಹೈಸ್ಕೂಲಿನಲ್ಲಿ ಗಣಿತ ದಿನಾಚರಣೆ



ಸಿದ್ಧಾಪುರ ಹೈಸ್ಕೂಲಿನಲ್ಲಿ ಗಣಿತ ದಿನಾಚರಣೆ

 


   

ಎಲ್ಲ ವಿಷಯಗಳ ತಾಯಿ ಗಣಿತ ಶಾಸ್ತ್ರ. ದೈನಂದಿನ ವ್ಯವಹಾರದಲ್ಲಿ ಗಣಿತವನ್ನು ತಿಳಿದವರು ಮಾತ್ರ ಜೀವನದಲ್ಲಿ  ಸೋಲನ್ನು ಮೆಟ್ಟಿ ನಿಲ್ಲಬಲ್ಲರು. ವಿಶ್ವಶ್ರೇಷ್ಠ  ಗಣಿತಜ್ಞರಲ್ಲಿ ಶ್ರೀನಿವಾಸನ್ ರಾಮಾನುಜಮ್ ಅಗ್ರಗಣ್ಯರು ಎಂದು ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕ ನಾಗರಾಜ್ ಶೆಟ್ಟಿ ಪ್ರತಿಪಾದಿಸಿದರು. ಅವರು ಸಂಸ್ಥೆಯಲ್ಲಿ ಆಯೋಜಿಸಿದ ಗಣಿತ ದಿನಾಚರಣೆಯ ಪ್ರಧಾನ ಭಾಷಣ ಮಾಡಿದರು.

---------------------------------------------------

ಗಣಿತ ಬಲ್ಲವ ಜಗ ಗೆಲ್ಲಬಲ್ಲ


ನಾಗರಾಜ್ ಶೆಟ್ಟಿ, 

ಗಣಿತ ಶಿಕ್ಷಕರು

-------------------------------------------------

ಅಧ್ಯಾಪಕ ಉದಯ ಗಾಂವಕಾರ ಮಾತನಾಡುತ್ತ ಕೇವಲ ಮನುಷ್ಯರು ಮಾತ್ರವಲ್ಲ ಪ್ರಕೃತಿಯ ಪ್ರಾಣಿ ಪಕ್ಷಿಗಳು ಕೂಡ ಲೆಕ್ಕ ಹಾಕಿಯೇ ಜೀವನ ಮಾಡುತ್ತವೆ.ಲೆಕ್ಕ ಮರೆತ ಜಗತ್ತು ಬಾಳುವುದು ಕಷ್ಟಸಾಧ್ಯ ಎಂದು ಅಭಿಮತಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಗಣಿತ ರಸಪ್ರಶ್ನೆ, ಗಣಿತ ಮಾದರಿ ತಯಾರಿಕೆ ಮತ್ತು ಗಣಿತಜ್ಞರ ಭಾವಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿ ವಿಜೇತರನ್ನು ಪುರಸ್ಕರಿಸಲಾಯಿತು. 


ವಿಶ್ವ ಕಂಡ ಶ್ರೇಷ್ಠ ಗಣಿತಜ್ಞ ರಾಮಾನುಜಂ ಎಂಬ ವಿಷಯದ ಬಗ್ಗೆ ಕುಮಾರಿ ಶ್ರೀನಿಧಿ  ಜಿ. ಹಾಗೂ ಬ್ರಾಹ್ಮೀಶ್ರೀ ಮಾತನ್ನಾಡಿದರು. ಏರ್ಪಡಿಸಿದ್ದ ಗಣಿತ ಮಾದರಿಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಂಸ್ಥೆಯ ಮುಖ್ಯಸ್ಥರಾದ ಚಂದ್ರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.







 ಗಣಿತ ಶಿಕ್ಷಕ ಉದಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಬಳೆಗಾರ ಸರ್ವರನ್ನು ಸ್ವಾಗತಿಸಿದರು. ಪೂರ್ಣಿಮಾ ಭಟ್ ವಂದಿಸಿದರು. ಹರ್ಷಿನಿ ತಂಡದವರು ಪ್ರಾರ್ಥಿಸಿದರು. ಕುಮಾರ್ ಜ್ಞಾನ ಪುತ್ರನ್ ಮತ್ತು ಶ್ರೀಶಾಂತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಶಿಕ್ಷಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:

ಗಣಿತ ದಿನ: ಬರೆಹಗಾರ್ತಿ ಪೂರ್ಣಿಮಾ ಕಮಲಶಿಲೆಯವರ ಪ್ರತಿಕ್ರಿಯೆ

ಪೂರ್ಣಿಮಾ ಕಮಲಶಿಲೆ





---------------------------------------

ಚಿತ್ರ ಸಂಪುಟ

*ಚಿತ್ರ ರಚನಾ ಸ್ಪರ್ಧೆ

ವಿಜೇತರಿಗೆ ಬಹುಮಾನ
ಮಾದರಿ ರಚನಾ ಸ್ಪರ್ಧೆ

-------------------------------------------

( ಬರೆಹ: ರಮಾನಂದ ನಾಯಕ, ಕನ್ನಡ ಭಾಷಾ ಶಿಕ್ಷಕರು)

Thursday 18 August 2022

ಸಿದ್ಧಾಪುರ ಪ್ರೌಢಶಾಲೆ: ಗಮನ ಸೆಳೆದ ಅಮೃತ ಮೆರವಣಿಗೆ


ಗಾಂಧಿ, ನೆಹರೂ, ಅಂಬೇಡ್ಕರ್‌, ಮೌಲಾನಾ ಅಜಾದ್‌,ಚೆನ್ನಮ್ಮ, ಲಕ್ಷ್ಮಿ ಬಾಯಿ, ಸಾವಿತ್ರಿ ಫುಲೆ, ಭಗತ್‌ ಸಿಂಗ್‌, ನೇತಾಜಿ ಬೋಸ್‌ ಹೀಗೆ ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಿದ ಮಹಾನಾಯಕರುಗಳ ವೇಷ ತೊಟ್ಟ ವಿದ್ಯಾರ್ಥಿಗಳ ಮೆರವಣಿಗೆ ನೋಡುತ್ತಾ ಸಿದ್ಧಾಪುರ ಪೇಟೆಯ ಜನರು ಸ್ಥಬ್ಧರಾದರು. ಆರು ನೂರು ವಿದ್ಯಾರ್ಥಿಗಳ ಈ ಮೆರವಣಿಗೆಯಲ್ಲಿ ಜೈ ಹಿಂದ್‌, ವಂದೇ ಮಾತರಂ, ಇಂಕ್ವಿಲಾಬ್‌ ಜಿಂದಾಬಾದ್‌ ಮುಂತಾದ ಸ್ವಾತಂತ್ರ್ಯದ ಕಿಚ್ಚನ್ನು ಜೀವಂತವಾಗಿಟ್ಟ ಘೋಷಣೆಗಳು ಮಾರ್ದನಿಸಿದವು. ಶಿಕ್ಊಷಕರು, ಎಸ್ ಡಿ.ಎಮ್.ಸಿ ಪದಾಧಿಕಾರಿಗಳು, ಊರವರು ಈ ಮೆರವಣಿಗೆಯಲ್ಲಿ ಸೇರಿಕೊಂಡು ಪ್ರೋತ್ಸಾಹಿಸಿದರು. ಮೆರವಣಿಗೆಯುದ್ದಕ್ಕೂ ಹಳೆ ವಿದ್ಯಾರ್ಥಿಗಳು ಡ್ರೋನ್‌ ಕ್ಯಾಮರಾದ ಮೂಲಕ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಮೆರವಣಿಗೆಯ ಅಂತ್ಯದಲ್ಲಿ ಮಕ್ಕಳೆಲ್ಲ 75 ಸಂಖ್ಯೆಯ ವಿನ್ಯಾಸದಲ್ಲಿ ನಿಂತು ಎತ್ತರದ ಡ್ರೋನ್‌ ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾದರು.

ಕೆಲವು ಚಿತ್ರಗಳು ಇಲ್ಲಿವೆ.
























Saturday 18 June 2022

ಪ್ರಜಾಪ್ರಭುತ್ವದ ಪಾಠ ಹೇಳುವ ಶಾಲಾಚುನಾವಣೆ

ಸಿದ್ಧಾಪುರದ ಸರ್ಕಾರಿ ಪ್ರೌಢಶಾಲೆಯು ಅತ್ಯಂತ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆ. ಈ ಶಾಲೆಯ 642 ಮಕ್ಕಳಲ್ಲಿ 611 ವಿದ್ಯಾರ್ಥಿಗಳು ಇಂದು ಶಾಲಾ ಸಂಸತ್ತಿಗಾಗಿ ನಡೆದ  ಮಾದರಿ ಮತದಾನದಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೊದಲ ಪಾಠ ಪಡೆದರು.

ಶಾಲಾ ಸಂಸತ್ತು ಪ್ರಜಾಪ್ರಭುತ್ವದ ಆಚರಣೆಯ ಜೊತೆ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಎಳವೆಯಲ್ಲೇ ತಿಳಿಸುತ್ತದೆ. ಭಿನ್ನಾಭಿಪ್ರಾಯವನ್ನು ಗೌರವಿಸುವುದು, ಬಹುಮತದ ತೀರ್ಮಾನಕ್ಕೆ ಬದ್ಧರಾಗುವುದು, ಅಧಿಕಾರವನ್ನು ಪ್ರಶ್ನಿಸುವುದು, ಸಂವಿಧಾನದಲ್ಲಿ ನಂಬಿಕೆಯಿಡುವುದು ಇತ್ಯಾದಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತದೆ. ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವಲ್ಲಿ ನೆರವಾಗುತ್ತದೆ.


ಇಂದಿನ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆಸಲಾಯಿತು. ಇವಿಎಂ ಆ್ಯಪ್ ಮೂಲಕ 6  ಬೂತ್‌ಗಳಲ್ಲಿ  ವಿದ್ಯಾರ್ಥಿಗಳು ಮತ ಚಲಾಯಿಸಿದರು. 

ವಿದ್ಯಾರ್ಥಿ ಉಪನಾಯಕ/ ಉಪನಾಯಕಿ ಚುನಾವಣಾ ಇ-ಬ್ಯಾಲೆಟ್

 


ವಿದ್ಯಾರ್ಥಿ ನಾಯಕ/ ನಾಯಕಿ ಚುನಾವಣೆಯ ಇ-ಬ್ಯಾಲೆಟ್




ಶಾಲಾ ನಾಯಕ ಸ್ಥಾನಕ್ಕೆ ಮೂರು ಅಭ್ಯರ್ಥಿಗಳು, ಉಪನಾಯಕ ಸ್ಥಾನಕ್ಕೆ ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೂರು ಸುತ್ತುಗಳ ಮತ ಎಣಿಕೆಯ ತರುವಾಯ ಅಂತಿಮವಾಗಿ ✌
  • ಭರತ್ ಕುಮಾರ್ ಶಾಲಾ ನಾಯಕನಾಗಿ, 
  • ಅಶ್ವಿನ್ ಉಪನಾಯಕನಾಗಿ, 
  • ಸ್ಪಂದನಾ ಉಳ್ಳೂರು ಶಾಲಾ ಉಪನಾಯಕಿಯಾಗಿ ಆಯ್ಕೆಗೊಂಡರು.
ಭರತ್ ಕುಮಾರ್, ವಿದ್ಯಾರ್ಥಿ ನಾಯಕ

ಅಶ್ವಿನ್, ವಿದ್ಯಾರ್ಥಿ ಉಪನಾಯಕ

ಸ್ಪಂದನಾ ಉಳ್ಳೂರು,  ವಿದ್ಯಾರ್ಥಿ ಉಪನಾಯಕ

ಪ್ರಭಾರ ಮುಖ್ಯ ಶಿಕ್ಷಕ ಉದಯ ಗಾಂವಕಾರ ಮುಖ್ಯ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕ ನಾಗರಾಜ್ ಶೆಟ್ಟಿ, ಉದಯ್ ಕುಮಾರ್ ಮತಗಳ ಲೆಕ್ಕ ಪ್ರಕ್ರಿಯೆಯನ್ನು ನಡೆಸಿದರು. ಎನ್‌ಎಸ್‌ಎಸ್ ಸ್ವಯಂಸೇವಕರು ಭದ್ರತಾ ಸಿಬ್ಬಂದಿಗಳಾಗಿ ಸಹಕರಿಸಿದರು.


ಮತದಾನ ಪ್ರಕ್ರಿಯೆಯ ಅಧಿಕೃತ ಆದೇಶದ ನಂತರ ಸ್ಪರ್ಧಿಗಳ ನಾಮಪತ್ರ ಸಲ್ಲಿಸುವಿಕೆ,  ಹಿಂತೆಗೆದುಕೊಳ್ಳುವಿಕೆ, ಚುನಾವಣಾ ಪ್ರಚಾರ ಇತ್ಯಾದಿ ಚುನಾವಣಾ ಪ್ರಕ್ರಿಯೆಗಳು ಸಹ ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿ ನಡೆದಿದ್ದವು.



ಮತ ಎಣಿಕೆಯ ನಂತರ ನಡೆದ ಸಭೆಯಲ್ಲಿ ಗ್ರಾ. ಪಂ. ಅಧ್ಯಕ್ಷರಾದ ಶೇಖರ್ ಕುಲಾಲ್  ವಿಜೇತರಿಗೆ ಅಧಿಕೃತ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.  ಗ್ರಾ. ಪಂ. ಸದಸ್ಯರಾದ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು. ರಾಘವೇಂದ್ರ ಚಾತ್ರಮಕ್ಕಿ ಕಾರ್ಯಕ್ರಮ ನಿರ್ವಹಿಸಿದರು.




Tuesday 14 June 2022

ಹತ್ತನೇ ತರಗತಿ ಫಲಿತಾಂಶ: ಸಿದ್ಧಾಪುರ ಪ್ರೌಢಶಾಲೆಯ ಸಾಧನೆ

 2021-22 ನೇ ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆ ತೆಗೆದುಕೊಂಡ ಸಿದ್ಧಾಪುರ ಪ್ರೌಢಶಾಲೆ 195 ವಿದ್ಯಾರ್ಥಿಗಳಲ್ಲಿ  182 ವಿದ್ಯಾರ್ಥಿಗಳು ಪಾಸಾಗುವ ಮೂಲಕ 93.33ಶೇಖಡಾ ಉತ್ತೀರ್ಣತೆಯನ್ನು ದಾಖಲಿಸಿದೆ. ಕನ್ನಡ ಮಾಧ್ಯಮದ 86 ವಿದ್ಯಾರ್ಥಿಗಳಲ್ಲಿ 77 ವಿದ್ಯಾರ್ಥಿಗಳು ಪಾಸಾಗಿದ್ದರೆ ಇಂಗ್ಲೀಷ್ ಮಾಧ್ಯಮದ 109 ವಿದ್ಯಾರ್ಥಿಗಳಲ್ಲಿ 105 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 

195 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲೂ 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ ಪಾಸಾಗಿದ್ದಾರೆ. 

ಶಾಲೆಯ ಕೀರ್ತಿಯನ್ನು ನಾಡಿಗೆಲ್ಲ ವ್ಯಾಪಿಸಲು ಕಾರಣರಾದ ವೈಷ್ಣವಿ, ರಿತಿಕಾ ಮತ್ತು ಸಮೀಕ್ಷಾ

625 ಅಂಕಗಳಿಗೆ ಎಲ್ಲ  625 ಅಂಕಗಳನ್ನು ಪಡೆದ  ವೈಷ್ಣವಿ , 624  ಅಂಕಗಳನ್ನು ಪಡೆದ ರಿತಿಕಾ ಮತ್ತು 621 ಅಂಕಗಳನ್ನು ಪಡೆದ ಸಮೀಕ್ಷಾ ಜೊತೆಯಲ್ಲಿ ಒಟ್ಟೂ 11 ವಿದ್ಯಾರ್ಥಿಗಳು 600 ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.